Hirannaiah or Hirannayya known by his stage name Master Hirannaiah a theatre artist in Karnataka, India.
ಇದರೊಂದಿಗೆ ಮೇ ೫ -೨೦೧೯ ರಂದು ಹಿರಣ್ಣಯ್ಯ ನವರ ನಿಧನ ದ ಸಮಯದಲ್ಲಿ ಬರೆದ ಚಿಕ್ಕ ಬರಹವೊಂದನ್ನು ಹಂಚಿಕೊಳ್ಳುತ್ತಿರುವೆ.
ಮೊನ್ನೆ ಸುದ್ದಿ ಕೇಳಿದಾಗಿನಿಂದ ಮನಸ್ಸು ಖಾಲಿ ಖಾಲಿ. ನಮ್ಮಣ್ಣ(ಅಪ್ಪನನ್ನು ಅಣ್ಣ ಎಂದೇ ಕರೆಯುತ್ತಿದ್ದುದು) ಹಿರಣ್ಣಯ್ಯ ನವರ ದೊಡ್ಡ ಅಭಿಮಾನಿಯಾಗಿದ್ದರು, ಅವರು ಹಿರಣ್ಣಯ್ಯ ನ ನಾಟಕಗಳ ಬಗ್ಗೆ ಹೇಳುತ್ತಿದ್ದ ಸ್ವಾರಸ್ಯಕರ ಸಂಗತಿಗಳು ನಾವು ಕಣ್ಣು ಬಾಯಿ ಬಿಟ್ಟು ಕೇಳುವಂತೆ ಮಾಡುತ್ತಿತ್ತು. ಅಪರೂಪಕ್ಕೆ ಬೆಂಗಳೂರಿಗೆ ಹೋದಾಗಲೆಲ್ಲಾ ಅಣ್ಣ, ಹಿರಣ್ಣಯ್ಯ ನವರ ಮನೆಗೆ ಭೇಟಿ ಕೊಟ್ಟು ಬಂದೇಬರುತ್ತಿದ್ದರು. ಮನೆಗೆ ಬಂದು ವಿಷಯಗಳನ್ನ ಸ್ವಾರಸ್ಯ ವಾಗಿ ವಿವರಿಸುವಾಗ ನಮಗೆ ಸ್ವರ್ಗಕ್ಕೆ ಮೂರೇ ಗೇಣು!
ಚಿಕ್ಕಂದಿನಿಂದಲೇ ನನಗೆ ಎಲ್ಲರಿಗೂ ಪತ್ರ ಬರೆಯುವ ಹುಚ್ಚಿತ್ತು, ತೀರಾ ಇತ್ತೀಚಿನ ವರೆಗೂ ಎಲ್ಲವನ್ನೂ ಜೋಪಾನವಾಗಿಟ್ಟಿದ್ದೆ, ಮನೆ ಬದಲಾಯಿಸುವ ಸಮಯದಲ್ಲಿ ಅನೇಕ ಪತ್ರಗಳು ಕಾಣೆಯಾಗಿವೆ. ಹಾಗೇಯೇ ನಾನು ಹಿರಣ್ಣಯ್ಯ ನವರಿಗೂ ಪತ್ರ, ಕೈಯಿಂದನೇ ಮಾಡಿದ ಗ್ರೀಟಿಂಗ್ಸ್ , ಕಳುಹಿಸುತ್ತಿದ್ದೆ, ಅನೇಕರಿಂದ ಮಾರುತ್ತರ ಬರದಿದ್ರೂ ಹಿರಣ್ಣಯ್ಯ ನವರಿಂದ ಮಾತ್ರಾ ಬಂದೇ ಬರುತ್ತಿತ್ತು!
ನಾನು ಹವ್ಯಾಸಕ್ಕಾಗಿ ಬರೆಯುವ ವ್ಯಂಗ್ಯಚಿತ್ರ ಗಳಿಗೆ ಮೊದಲು ದತ್ತು ಕಟ್ಟೆಹಕ್ಕಲು ಅಂತ ಸಿಗ್ನೇಚರ್ ಮಾಡ್ತಾಇದ್ದೆ, ಹಿರಣ್ಣಯನವರ ಒಂದು ಪತ್ರದಲ್ಲಿ ನನ್ನ ಹೆಸರನ್ನು ಅವರು ದತ್ತಾ-3 ಉಲ್ಲೇಖ ಮಾಡಿದ್ದನ್ನು ನೋಡಿದಮೇಲೆ ಅರೆ ಹೌದಲ್ಲಾ..ಹೀಗೇ ಇದ್ರೆ ಚೆನ್ನಾಗಿರುತ್ತಲ್ಲ ಅನ್ನಿಸಿ ಆಮೇಲೆ ಚಿತ್ರಗಳಲ್ಲಿ ದತ್ತಾ3 ಅಂತ ಬರೆಯಲು ಪ್ರಾರಂಬಿಸಿದೆ!
2009 ರಲ್ಲಿ ಅಪ್ಪ ಅಮ್ಮನೂ ಬದುಕಿ ಬಾಳಿದ ನನ್ನೂರನ್ನೂ ಬಿಟ್ಟು ನನ್ನ ಜೊತೆ ಬೆಂಗಳೂರಿಗೇ ವಲಸೆ ಬಂದಾಯ್ತು. ಹಳ್ಳಿ ಜೀವನದಲ್ಲಿ ಆರಾಮಾಗಿ ಕಳೆದಿದ್ದ ಅಪ್ಪ ಇಲ್ಲಿನ ಜೀವನಕ್ಕೆ ಹೊಂದಿಕೊಂಡದ್ದೇ ಒಂದು ಪವಾಡ! ಇದರ ಮದ್ಯೆ ಅನೇಕ ಬಾರಿ “ಒಂದ್ಸಾರಿ ಹಿರಣ್ಣಯನವರ ಮನೆಗೆ ಕರೆದುಕೊಂಡು ಹೋಗ್ ಮಾರಾಯ” ಅಂತ ಹೇಳಿದರೂ ನನಗೆ ಸಾದ್ಯವಾಗಿರಲಿಲ್ಲ. ಇದರ ಮದ್ಯೆ ಅಣ್ಞನಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿತ್ತು. ಒಂದಿನ ಅಣ್ಣ ಇಲ್ಲೇ ಹೊರಗೇ ಹೋಗಿ ಬರ್ತೀನಿ ಅಂತ ಹೇಳಿ ಹೋದೋರು ಎಷ್ಟು ಹೊತ್ತಾದ್ರೂ ಬಂದಿಲ್ಲ! ಅಮ್ಮನಿಗೆ ಕಳವಳ, ಅವರು ” ಫೋನ್ ಕೂಡಾ ತಗೊಂಡ್ ಹೋಗಿಲ್ಲ, ಎಲ್ಲ್ ಹೋಗ್ತೀನಿ ಅಂತಾನೂ ಹೇಳಿಲ್ಲ” ಅಂತ ಗೊಣಗತೊಡಗಿದಳು. ನಂಗೂ ಗಾಬರಿ ಯಾಗಿ ಅವರು ಹೋಗುತ್ತಿದ್ದ ದೇವಸ್ಥಾನ, ಅಂಗ್ಡಿ, ಎಲ್ಲಾ ಕಡೆಗೆ ಹೋಗಿ ವಿಚಾರಿಸಿದರೂ ಸುಳಿವಿಲ್ಲ! ಇನ್ನೇನು ಪೋಲಿಸ್ ಕಂಪ್ಲೇಂಟೇ ಕೊಡೋದೇನೂ ಅಂತ ಯೋಚಿಸುತ್ತಿರುವಾಗ, ಅಣ್ಣನ ಸವಾರಿ ಆಟೋದಿಂದ ಇಳಿಯಿತು! ನಮಗೆಲ್ಲ ಸಿಟ್ಟು, ದುಗುಡ. ಆದರೆ ಅಣ್ಣ ನಗುನಗುತ್ತಾ ಬಂದರು, “ಅಣಾ ಎಲ್ಲೋಗಿದ್ರಿ? ನಮ್ಗೆಲ್ಲಾ ಎಷ್ಟ್ ಗಾಬ್ರಿ ಆಗಿತ್ತು ಗೊತ್ತಾ?” ಅನ್ನುವಷ್ಟರ ಹೊತ್ತಲ್ಲಿ ಅಣ್ಣ ತಣ್ಣಗೆ, “ಹಿರಣ್ಣಯ್ಯ ನವರ ಮನೆಗೆ ಹೋಗಿದ್ದೆ” ಆಟೋದವನಿಗೆ ಅಡ್ರೆಸ್ ತೋರಿಸಿ ಅವನ ಸಹಾಯದಿಂದ “ರಂಗಭೂಮಿ” ಗೆ ಹೋಗಿ ಬಂದಿದ್ರು! ಗೆಲುವಿನಿಂದ ಅಲ್ಲಿನ ವಿಷಯಗಳನ್ನ ಹೇಳುವಾಗ ಅಣ್ಣನ ಕಣ್ಣಲ್ಲಿನ ಹೊಳಪು, ಆರೋಗ್ಯ ಸಮಸ್ಯೆ ಇಲ್ಲವೇನೋ ಎಂಬತ್ತಿತ್ತು.
ಮೂರುವರ್ಷಗಳ ಹಿಂದೆ ಅಣ್ಣ ತೀರಿಕೊಂಡ್ರು, ಅವತ್ತು ಮನಸ್ಸು ಖಾಲಿಯಾಗಿತ್ತು, ಮೊನ್ನೆ ಮತ್ತೆ ಖಾಲಿ ಖಾಲಿ ಅನ್ನಿಸತೊಡಗಿತು.
ಹಿರಣ್ಣಯ್ಯ ನಮ್ಮನ್ನು ಬಿಟ್ಟು ಹೋದರು, ಅವರು ಪತ್ರದಲ್ಲಿ ಬರೆದ ಹಾಗೆ ನನ್ನ ಹೆಸರು (ದತ್ತಾ3) ನನ್ನ ಚಿತ್ರಗಳಲ್ಲಿ ಯಾವಗಲೂ ಇರತ್ತೆ!